ಕನ್ನಡ ದೂರದರ್ಶಿ ವಾಹಿನಿಗಳ ಮಹಾ(ಮೆಗಾ) ಎಂಬ ಅಧಿಕಪ್ರಸಂಗೀ ಧಾರಾವಾಹಿಗಳು!?


18-10-1015 ರ ಮೈಸೂರಿನ "ಕನ್ನಡಿಗರ ಪ್ರಜಾನುಡಿ" ದಿನಪತ್ರಿಕೆಯ 'ಪ್ರಜಾ ಸಾಪ್ತಾಹಿಕ' ಪುರವಣಿಯಲ್ಲಿ ಪ್ರಕಟವಾಗಿದ್ದ ಈ ಬರವಣಿಗೆಯನ್ನು ನನ್ನ ಬ್ಲಾಗೋದುಗರಿಗಾಗಿ ಸಣ್ಣ ಸೇರಿಕೆ ತಿದ್ದುಪಡಿಯೊಡನೆ ಇಲ್ಲಿ ಮರುಪ್ರಕಟಿಸುತ್ತಿದ್ದೇನೆ.

ಕನ್ನಡ ದೂರದರ್ಶಿ ವಾಹಿನಿಗಳ ಮಹಾ(ಮೆಗಾ) ಎಂಬ ಅಧಿಕಪ್ರಸಂಗೀ ಧಾರಾವಾಹಿಗಳು!?

ನನ್ನ ಪತ್ನಿ "ಕಲರ್ಸ್‌ ಕನ್ನಡ" (ಹಳೆಯ "ಈಟಿವಿ ಕನ್ನಡ'') ಎಂಬ ಕನ್ನಡ ದೂರದರ್ಶಿ ವಾಹಿನಿಯಲ್ಲಿ ಬರುವ ಕೆಲವು ಧಾರಾವಾಹಿಗಳನ್ನು ನೋಡುವುದನ್ನು ಅಭ್ಯಾಸ ಮಾಡಿಕೊಂಡಿದ್ದುದರಿಂದ ಸಮಯ ಕಳೆಯಲೆಂದು ಜೊತೆಯಲ್ಲಿ ಕೂತು ನೋಡುವುದು ನನಗೂ ಸಹ ಅಭ್ಯಾಸವಾಗಿಬಿಟ್ಟಿತ್ತು..!

ಮುಖ್ಯವಾಗಿ ನೋಡುತ್ತಿದ್ದುದು ಕನ್ನಡದ ಮಹಾ ಬುದ್ಧಿವಂತ ನಿರ್ದೇಶಕನೆಂದು ನಾನು ನಂಬಿದ್ದ ಟಿ.ಎನ್‌. ಸೀತಾರಾಮ್‌ ನಿರ್ದೇಶನದ ಧಾರಾವಾಹಿಗಳನ್ನು.... "ಮಾಯಾಮೃಗ, ಜ್ವಾಲಾಮುಖಿ, ಮನ್ವಂತರ...'' ಮೊದಮೊದಲಿನವು ನೋಡಲು ಬೇಸರವಾಗುತ್ತಿರಲಿಲ್ಲ. ಅವುಗಳು ಒಂದು ನಿರ್ಧಿಷ್ಟ ದಿಕ್ಕಿನಲ್ಲಿ ನಿರ್ಧಿಷ್ಟ ಗತಿಯಲ್ಲಿ ಚಲಿಸಿ ಮುಕ್ತಾಯವಾದಂಥ ಧಾರಾವಾಹಿಗಳು. ಆದರೆ ಆತ ಆನಂತರ ನಿರ್ದೇಶಿಸಿದ "ಮುಕ್ತ; ಮುಕ್ತ ಮುಕ್ತ ಮತ್ತು ಮಹಾಪರ್ವ'' ಗಳೆಂಬ ಜಾಳು ಜಾಳಾಗಿ ನೇಯ್ದ ಹಳೆಯ ಬಟ್ಟೆಗಳಂತಹ ದಾರಾವಾಹಿಗಳು. "ಮಹಾಪರ್ವ'' ದಲ್ಲಿ ಯಾವುದೋ ಒಂದು ಕುಟುಂಬದ ಇಬ್ಬರು ಯುವತಿಯರ ಕಥೆಯನ್ನು ಹೇಳಲು ಹೊರಟು ಕೊನೆಗೆ ಒಬ್ಬ ದುಷ್ಟ ಅಪರಾಧಿಯ ಕಥೆಯನ್ನು ಹೇಳುತ್ತಾ ಅವನ ಸಾವಿನಲ್ಲಿ ಮುಕ್ತಾಯಗೊಳಿಸುವುದೊಂದು ವಿಪರ್ಯಾಸವೇ ಸರಿ. ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಈ ಮೂರನ್ನೂ ನಿರ್ವಹಿಸುತ್ತಿದ್ದ ಸೀತಾರಾಮ್‌ರವರು ತಾನೆಲ್ಲಿ ಹೋಗುತ್ತಿದ್ದೇನೆಂಬುದನ್ನೇ ಮರೆತು ಕೊನೆಗೂ ಅವರ ಕಥೆಯನ್ನು ಮುಕ್ತಾಯಮಾಡಿದ್ದರು.

ಈ ದೂರದರ್ಶಿ ದಾರಾವಾಹಿಗಳು ಪ್ರಾರಂಬವಾಗುವುದಕ್ಕೆ ಮೊದಲು ಓದುಗರು ಸುಧಾ, ಪ್ರಜಾಮತ ಮತ್ತು ತರಂಗ ಸಾಪ್ತಾಹಿಕಗಳು ಮತ್ತು ಮಾಸಿಕಗಳಾದ ಮಯೂರ, ತುಷಾರ ಗಳಲ್ಲಿ ಬರುತ್ತಿದ್ದ ಕಥೆ, ನೀಳ್ಗಥೆಗಳು ಮತ್ತು ದಾರಾವಾಹಿಗಳನ್ನಲ್ಲದೆ ಇನ್ನಿತರೆ ಕಥೆ ಕಾದಂಬರಿ ಪುಸ್ತಕಗಳನ್ನು ಒದುತ್ತಿದ್ದರು. ಸರಕಾರಿ ದೂರದರ್ಶನ ವಾಹಿನಿಯು ಸಾಹಿತ್ಯದ ಸಣ್ಣಕಥೆ ಮತ್ತು ಕಾದಂಬರಿ ಆಧರಿಸಿ ಕಿರುತೆರೆಗೆ ಅಳವಡಿಸಿದ ದಾರಾವಾಹಿಗಳನ್ನು ಪ್ರಾರಂಬಿಸಿದನಂತರ ಓದುಗರು ಅವುಗಳನ್ನು ಓದುವುದನ್ನೇ ಮರೆತು ನೋಡಲು ಕುಳಿತರು. ಓದುವ ಅಭ್ಯಾಸ ಮರೆತೇ ಹೋಯಿತು. ಅದಿರಲಿ ಇದರಿಂದಾಗಿ ಕನ್ನಡದಲ್ಲೇಕೆ ಭಾರತೀಯ ಎಲ್ಲಾ ಭಾಷೆಗಳಿಗೆ ಅನ್ವಯಿಸಿ ದೂರದರ್ಶಿ ವಾಹಿನಿಗಳಿಗೆ ಬರೆಯುವ ಒಂದು ಹೊಸ ಪೀಳಿಗೆಯೇ ಸೃಷ್ಟಿಯಾಯಿತು. ಹಾಗೆಯೇ ಅವುಗಳ ನಿರೂಪಣೆ ಮತ್ತು ಚಲನೆ ಇದ್ದುದರಲ್ಲಿ ಪರವಾಗಿಲ್ಲ ಎಂಬಷ್ಟರ ಮಟ್ಟಿಗೆ ಸಮಂಜಸವಾಗಿರುತ್ತಿತ್ತು. ಸರಕಾರಿ ದೂರದರ್ಶನವು ಇವುಗಳಿಗಾಗಿ ಕೆಲವು ಷರತ್ತುಗಳನ್ನು ಹಾಕಿ ಇಂತಿಷ್ಟೇ ಅವಧಿಯಲ್ಲಿ ಇಂತಿಷ್ಟೇ ಕಂತುಗಳಲ್ಲಿ ಅವುಗಳು ಮುಗಿಯುವ ನಿಯಮಗಳಿಗೆ ಒಳಪಡಿಸುತ್ತಿತ್ತು. ಪ್ರೇಕ್ಷಕರು ಕೂಡ ಇಷ್ಟಪಟ್ಟು ಪಟ್ಟುಹಿಡಿದು ದೂರದರ್ಶನವೆಂಬ ಮಾಯಾ ಪೆಟ್ಟಿಗೆ ಮುಂದೆ ಕುಳಿತು ಅವುಗಳನ್ನು ನೋಡುತ್ತಿದ್ದರು. ಉದಾಹರಣೆಗೆ ಕನ್ನಡದ "ಮಾಲ್ಗುಡಿ ದಿನಗಳು', ಹಿಂದಿಯ "ಮಹಾ ಭಾರತ' "ರಾಮಾಯಣ' ಮತ್ತು "ಚಾಣಕ್ಯ'.

ಖಾಸಗಿ ವಾಹಿನಿಗಳು ಪ್ರಾರಂಬವಾಗಿದ್ದೇ ತಡ ದುಡ್ಡು ಸುರಿದು ಕಳಪೆ ಸಾಮಗ್ರಿ ಒದಗಿಸಲು ತೊಡಗಿದರು ನಿರ್ಮಾಪಕರು ಮತ್ತು ನಿರ್ದೇಶಕರುಗಳು. ಮತ್ತು ಸರಕಾರಿ ದೂರದರ್ಶನದಿಂದ ಪ್ರೇಕ್ಷಕರನ್ನೂ ತಮ್ಮತ್ತ ಸೆಳೆದುಕೊಂಡರು. ಸಾರ್ವಜನಿಕ ಪ್ರೇಕ್ಷಕರು ಮಾಯಾಪೆಟ್ಟಿಗೆಯ ಖಾಸಗಿ ವಾಹಿನಿಗಳ ಮಾಯಾಜಾಲಕ್ಕೆ ಸಿಲುಕಿ ಅಲ್ಲಿಂದ ಹೊರಬರಲಾಗದೆ ನರಳುವಂತಾದರು. ಕ್ರಿಯೆಯೇ ಇಲ್ಲದೆ ನಿಷ್ಕ್ರಿಯವಾಗಿ ನಿಂತಲ್ಲೇ ನಿಂತು ಬರೀ ಒಣ ಸಂಭಾಷಣೆಗಳ ಅನವಶ್ಯಕ ದೃಶ್ಯಗಳ ಸರಕಾಗಿವೆ. ಏನನ್ನೋ ಹೇಳಲು ಹೋಗಿ ಇನ್ನೇನೋ ಹೇಳುವುದು?! ಹೀಗೆ ಮತ್ಯಾವ ಕಡೆಗೋ ತಿರುಗಿದ ಕಥೆಗಳು ಓಟವನ್ನು ಕಳೆದುಕೊಳ್ಳುವುದು... ಆಕಡೆ ಈಕಡೆ ಮುಗ್ಗುರಿಸುತ್ತಾ ಹಿಂದು ಮುಂದಾಗುವುದು, ಆಗಾಗಲೇ ಹೇಳಿದ ಕಥೆಯನ್ನೇ ಮತ್ತೊಂದು ಕೋನದಲ್ಲಿ ಚಿತ್ರೀಕರಿಸಿ ಹೇಳುವುದು ಸಾಮಾನ್ಯವಾಗಿ ಹೋಯಿತು. ಈ ರೀತಿ ಹಾವು ಏಣಿಯಾಟದಲ್ಲಿ ತೊಡಗಿದ ಕಥೆಗಳು ನಿಂತ ನೀರಾದವು. ಅಲ್ಲಿಯೇ ಕೊಳೆತು ನಾರುವ ಹೊಂಡಗಳಾದವು. ಬರಹಗಾರ ನಿರ್ದೇಶಕ ಮಹಾಶಯರುಗಳು ಈ ಬೆಳವಣಿಗೆಯನ್ನು ಮಹಾ(ಮೆಗಾ) ಎಂದು ಘೋಷಿಸಿ ಹೊಸ ಬಗೆಯ ದಾರವಾಹಿಗಳ ಉಗಮಕ್ಕೆ ನಾಂದಿಯನ್ನು ಹಾಡಿದರು. ಇವೆಲ್ಲದರ ಕಾರಣ ಪ್ರೇಕ್ಷಕರು ಒಳ್ಳೆಯ ಸಾಹಿತ್ಯ ಓದುವುದನ್ನು ಮರೆತರು, ಒಳ್ಳೆಯ ಕಿರುತೆರೆ ಕಥೆಗಳ ದಾರಾವಾಹಿಗಳನ್ನು ನೋಡುವ ಭಾಗ್ಯವನ್ನೂ ಕಳೆದುಕೊಂಡರು.

"ಈಟಿವಿ ಕನ್ನಡ'' ವಾಹಿನಿಯು ಬೆಂಗಳೂರು ಹೊರತುಪಡಿಸಿ ಕರ್ನಾಟಕದ ಇತರ ಜಿಲ್ಲಾ ಕೇಂದ್ರಗಳಲ್ಲಿ ದಾರಾವಾಹಿಗಳ ಹೆಸರಲ್ಲಿ "ಸಂವಾದ'' ಮತ್ತು "ಸಂತೆ'' ಕಾರ್ಯಕ್ರಮಗಳನ್ನು ಏರ್ಪಡಿಸಿ ಕಥೆಗಳನ್ನು ಮತ್ತಷ್ಟು ತಿರುಚಿ ಅವುಗಳ ಚಲನೆ/ಗತಿಯನ್ನೇ ಬದಲಾಯಿಸುತ್ತಾ "ಮುಕ್ತ ಮುಕ್ತ'' ಎಂಬ ದಾರಾವಾಹಿಯನ್ನು1500 ಕಂತುಗಳವರೆಗೆ ಮುಂದುವರಿಸಿದರು. ಕಡೆಗೆ ಪ್ರೇಕ್ಷಕರಿಗೆ ಸಮಾದಾನವನ್ನು ಹೇಳಿದ ನಿರ್ದೇಶಕ-ಕಥೆಗಾರರು ಅದರ ಮುಕ್ತಾಯಕ್ಕೆ ಮಂಗಳ ಆಡಿದರು. ಬಹುಷಃ ಈ ಒಂದು ಕಾರಣಕ್ಕಾಗಿ- ರಬಹುದು ಟಿ.ಎನ್‌.ಸೀತಾರಾಮ್‌ರವರು "ಮಹಾ ಪರ್ವ'' ದ ನಂತರ "ಈಟಿವಿ ಕನ್ನಡ'' (ಈಗ "ಕಲರ್ಸ್‌ ಕನ್ನಡ'') ದಲ್ಲಿ ಯಾವ ದಾರಾವಾಹಿಗಳ ಸೊಲ್ಲಿಲ್ಲದೆ ಮರೆಯಾಗಿದ್ದಾರೆ.

ಬರಹಗಾರರು, ನಿರ್ದೇಶಕರು ಮತ್ತು ನಿರ್ಮಾಪಕರುಗಳು ಮರೆಯದೆ ಅರ್ಥಮಾಡಿಕೊಳ್ಳಬೇಕು ಕಥೆಗಳಿಗೆ ಒಂದು ನಿರ್ದಿಷ್ಟ ಪ್ರಾರಂಬ, ಸಂಘರ್ಷ, ದಿಕ್ಕು, ಮಧ್ಯದಲ್ಲಿ ಒಂದಿಷ್ಟು ಸಂಘರ್ಷದ ಏರಿಳಿತಗಳು, ನಂತರ ಮುಕ್ತಾಯದೆಡೆಗೆ ಘಟನೆಗಳ ವಿವರಣೆ ಮತ್ತು ಅಂತಿಮವಾಗಿ ಒಂದು ನಿರ್ದಿಷ್ಟ ಮುಕ್ತಾಯ ಇರುತ್ತದೆಂಬುದನ್ನು! ನಿರ್ದೇಶಕನಾಗಲಿ ಚಿತ್ರಕಥೆಗಾರನಾಗಲಿ ಡಾನ್‌ ಬ್ರೌನ್‌ ನ ಕಾದಂಬರಿಗಳನ್ನಾಗಲಿ ಅಥವಾ ಹರ್ಮನ್‌ ಹೆಸ್‌"ಸಿದ್ದಾರ್ಥ'' ಕಾದಂಬರಿಯನ್ನಾಗಲಿ ಓದುವುದು ಒಳಿತು; ಅಥವಾ ಸ್ಟಿವನ್‌ ಸ್ಪೀಲ್‌ಬರ್ಗ್‌ ಸಿನೆಮಾಗಳನ್ನಾಗಲಿ ನೋಡಿ ದೃಶ್ಯಮಾಧ್ಯಮದ ಮೂಲಕ ಕಥೆ ಹೇಳುವ ಕಲೆಯನ್ನು ಕಲಿಯಬೇಕು.

ನಾನು ಚಿಕ್ಕವನಿದ್ದಾಗ ನಮ್ಮೂರಿನ ಅಗಸರ ನರಸಪ್ಪ ಹೇಳುತ್ತಿದ್ದ ಜಾನಪದ ಕಥೆಗಳು ಕೇಳುಗರನ್ನು ಬೇರೊಂದು ಕನಸಿನ ಲೋಕಕ್ಕೇ ಕರೆದೊಯ್ಯುತ್ತಿದ್ದವು. ಕೇಳುಗರು ಆತನ ಕಥೆ ಹೇಳುವ ಮೋಡಿಗೇ ಒಳಗಾಗಿಬಿಡುತ್ತಿದ್ದರು. ಆತನಿಗೆ ಕಥೆ ಹೇಳುವ ಕಲೆ ಚೆನ್ನಾಗಿ ತಿಳಿದಿತ್ತು... ಅದೂ ಶ್ರವ್ಯ ಮಾಧ್ಯಮದ ಮೂಲಕ. ಈ ನಿಟ್ಟಿನಲ್ಲಿ ನಿರ್ಮಾಪಕರು, ನಿರ್ದೇಶಕರು ಮತ್ತು ಚಿತ್ರಕಥೆಗಾರರು ದೃಶ್ಯ-ಶ್ರವ್ಯ ಮಾಧ್ಯಮಗಳಾದ ದೂರದರ್ಶಿ ವಾಹಿನಿಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದೊಳ್ಳೆಯದು. ಜನ ನೋಡುತ್ತಿದ್ದಾರೆ ಎಂಬ ಕಾರಣಕ್ಕೆ ನಾಚಿಕೆ, ಮಾನ, ಮರ್ಯಾದೆ ಬಿಟ್ಟು ಬರಹಗಾರ, ನಿರ್ದೇಶಕ ಮತ್ತು ವಾಹಿನಿಗಳು ಕೆಳಹಂತಕ್ಕಿಳಿದಿದ್ದಾರೆ.

"ಈಟಿವಿ ಕನ್ನಡ" (ಈಗ "ಕಲರ್ಸ್‌ ಕನ್ನಡ") ವಾಹಿನಿಯು ಪ್ರಸಾರಮಾಡುತ್ತಿರುವ "ಲಕ್ಷ್ಮೀ ಬಾರಮ್ಮ", "ಅಗ್ನಿ ಸಾಕ್ಷಿ" ಮತ್ತು "ಪುಟ್ಟಗೌರಿ ಮದುವೆ" ದಾರಾವಾಹಿಗಳನ್ನು ನೋಡುತ್ತಿದ್ದ ನಾನು... ನನ್ನ ಮಗಳು "ಆ ಡಬ್ಬಾ ದಾರಾವಾಹಿಗಳನ್ನೇನು ನೋಡುತ್ತೀರ?!” ಎಂದು ಬೈದರೂ ಬಿಡದೆ ನೋಡುತ್ತಿದ್ದವನು... ಇಲ್ಲಿ ಅವುಗಳನ್ನು ಉದಹರಿಸುತ್ತಿದ್ದೇನೆ. ಇವುಗಳನ್ನು ಮುನ್ನಡೆಸುವಲ್ಲಿ ಚಿತ್ರಕಥೆಗಾರರು ಮತ್ತು ನಿರ್ದೇಶಕರು ಕಥೆಯನ್ನು ನೇರವಾಗಿ ಹೇಳದೆ ತಿರುಚು-ಮುರುಚು ಮಾಡಿ "ಹಾಡಿದ್ದೇ ಹಾಡೋ ಕಿಸುಬಾಯಿ ದಾಸ..." ಎಂಬ ಗಾದೆ ಮಾತಿನ ಹಾಗೆ ಹೇಳಿದ್ದೇ ಹೇಳುತ್ತಾ ಪ್ರೇಕ್ಷಕರ ಸಹನೆ ತಿನ್ನುವ ಮೂಲಕ ಕಥೆ ಹೇಳುವ ಕಲೆಯನ್ನೇ ಕೊಂದುಹಾಕಿದ್ದಾರೆ. ಇವುಗಳನ್ನೇಕೆ ನೋಡುತ್ತಿದ್ದೆನು..? ಪ್ರಶ್ನೆಗೆ ನನ್ನ ಉತ್ತರ ಬಹುಷಃ ನಮ್ಮ ನಿರ್ಮಾಪಕರು ನಿರ್ದೇಶಕರು ದಾರಾವಾಹಿಗಳನ್ನು ಎಲ್ಲಿ..? ಹೇಗೆ..? ಎಷ್ಟು..? ಕಳಪೆಯಾಗಿ ಚಿತ್ರೀಕರಿಸಿ ಸಂಪಾದಿಸುತ್ತಿದ್ದಾರೆ ಎನ್ನುವುದನ್ನು ಅಭ್ಯಸಿಸುವುದಾಗಿತ್ತು. ನಾನೀಗ ಉತ್ತಮ ಕಥೆಗಳನ್ನು ಓದುವುದಕ್ಕಾಗಿ... ಮಯೂರ, ತುಷಾರ ಮಾಸಿಕ; ಸುಧಾ, ತರಂಗ ಸಾಪ್ತಾಹಿಕ... ಮತ್ತಿನ್ನಿತರ ಪುರವಣಿಗಳಲ್ಲಿ ಹುಡುಕುತ್ತಿದ್ದೇನೆ...! ###
ಟಿ.ದಿವಾಕರ
ಅಡಿಬರಹ:
ದೂರದರ್ಶಿ ವಾಹಿನಿಗಳ ಧಾರಾವಾಹಿಗಳ ಬಗ್ಗೆ ಮತ್ತವುಗಳ ಕಾರ್ಯಕ್ರಮಗಳ ಬಗ್ಗೆ ಬರೆಯಲು ಬೇಕಾದಷ್ಟಿದೆ. ಸರತಿಯಲ್ಲಿ ಸೇರಿಸಿಕೊಳ್ಳಲಾಗಿದೆ.

Comments

Popular posts from this blog

ಲಾಸ್‌ಎಂಜಲಿಸ್‌ನಿಂದ ಟಿಟಾನ್‌ ವಿಲೇಜ್‌ವರೆಗೆ

ಜೀವಂತ ಕ್ರಿಯಾಶೀಲ ಜ್ವಾಲಾಮುಖಿಯ ಮೇಲೆ 18 ಗಂಟೆಗಳ ಓಡಾಟ

ಕನ್ನಡಕ್ಕಾಗಿ ವಿಂಡೋಸ್ ಎದುರು ಲಿನಕ್ಸ್ ಗಣಕ ನಿರ್ವಹಣಾ ತಂತ್ರಾಂಶ