ದೆವ್ವಗೋಳು ತಿನ್ನೋ ಹೊತ್ನಲ್ಲಿ ಚಿತ್ರಾನ್ನ ಮಾಡಿಸಿಕೊಂಡು ತಿಂದುಂಡ ಕಥೆ


ದೆವ್ವಗೋಳು ತಿನ್ನೋ ಹೊತ್ನಲ್ಲಿ ಚಿತ್ರಾನ್ನ ಮಾಡಿಸಿಕೊಂಡು ತಿಂದುಂಡ ಕಥೆ

ವತ್ತು ಸಂಕ್ರಾಂತಿ ಹಬ್ಬ. ಊರಿನಲ್ಲಿ ಹಬ್ಬದ ಸಡಗರ. ಆಚರಣೆ ಸಂಜೆ ಹೊತ್ನಾಗ್ಮಾತ್ರ. ನನಗಾಗ ಸುಮಾರು ಹನ್ನೊಂದ್ಹನ್ನೆರಡು ವರ್ಷಗಳಿದ್ದಿರಬಹ್ದು. ಮಾಧ್ಯಮಿಕ ಏಳನೇ ಇಯತ್ತೆಯಲ್ಲಿ ಕಲಿಯುತ್ತಿದ್ದ ಹುಡುಗ. ಹಬ್ಬದ ರಜೆ ಇತ್ತು. ಇಡೀದಿನ ಸಡಗರ...ಊರು ಹುಡುಗ್ರು ಜೊತೆ ಕುಣಿದಾಡಿ ಸಂಜೆ ವೇಳ್ಯಾಗೊ ಹೊತ್ಗೆ ದಣಿದುಹೋಗಿದ್ದವ ನಾನು! ಆಟವಾಡಿ ಮನೆಗೆ ಬಂದಾಗ ಸುಮಾರು ನಾಲ್ಕೂವರೆಯಿಂದ ಐದು ಗಂಟೆ ಸಮಯವಿರಬಹುದು. ಮನೆಯೊಳಗೆ ಹಬ್ಬದ ತಯಾರಿ ನಡೆಯುತ್ತಿತ್ತು. ಕಣ್ಣುಗಳಿಗೆ ನಿದ್ದೆಯಾವರಿಸುತ್ತಿತ್ತು...ಮನೆಯ ಹೊರಗಿನ ಜಗುಲಿಯ ಮೇಲೆ ಮುದುರಿ ಮಲಗುತ್ತಾ ನಾನು ಅಮ್ಮನಿಗೆ ಹೇಳಿದ ತಾಕೀತಿನ ಮಾತು, “ರಾತ್ರಿ ಎಚ್ಚರವಾದಮೇಲೆ ನನಗೆ ಹಬ್ಬದೂಟಕ್ಕೆ ಚಿತ್ರಾನ್ನವಿರಿಸಿರಬೇಕು.” ನಮ್ಮ ಮನೆಯ ಪಡಸಾಲೆಯಲ್ಲಿ ತಳವೂರುತ್ತಿದ್ದ ಅಗಸರ ನರಸವ್ವ ನಾನು ಅಮ್ಮನಿಗೆ ಹೇಳಿದ ಈ ತಾಕೀತಿನ ಮಾತನ್ನು ಕೇಳಿಸಿಕೊಂಡಿದ್ದಳು!

ನನ್ನನ್ನು ಯಾರೋ ಎಚ್ಚರಿಸುತ್ತಿದ್ದರು, “ದಿವಾಕರ...ಏಯ್‌ ದಿವಾಕರ ಏಳೋ…ಚಿತ್ರಾನ್ನ ತಿನ್ನಲ್ಲವೇನೋ ದಿವಾಕರ..?” ಚಿತ್ರಾನ್ನದ ಮಾತು ಕಿವಿಗೆ ಬೀಳುತ್ತಲೇ ನಾನು ದಡಕ್ಕನೆ ಎದ್ದು ಕುಳಿತಿದ್ದೆ. ನನ್ನನ್ನು ಏಳಿಸುತ್ತಿದ್ದುದು ಅಗಸರ ನರಸವ್ವ. ಬುಜವಿಡಿದು ಅಲ್ಲಾಡಿಸುತ್ತಿದ್ದಳು ನಿದ್ದೆಯ ಮಂಪರಿನಿಂದ ಹೊರಬರಲು. ಕಣ್ಣುಜ್ಜಿಕೊಳ್ಳುತ್ತಾ ಮಂಪರಿನಿಂದ ಈಚೆಗೆ ಬಂದು ವಾಸ್ತವದ ಅರಿವಾದಾಗ ನಾನು ಎಲ್ಲಿ ಮಲಗಿದ್ದೆನೋ ಅದೇ ಜಾಗದ್ದಲ್ಲಿ ಮಲಗಿದ್ದೆ. ನನ್ನನ್ನು ಯಾರೂ ಏಳಿಸಿ ಕರೆದುಕೊಂಡು ಹೋಗಿ ಒಳಗೆ ಬೇರೆ ಕಡೆ ಮಲಗಿಸಿ ಏನನ್ನೂ ಹೊದೆಸಿರಲಿಲ್ಲ. ಅಗಸರ ನರಸವ್ವ ಹಬ್ಬದೂಟದ ಬಗ್ಗೆಯೇ ನನಗೆ ಹೇಳುತ್ತಿದ್ದಳು. ಸುಮಾರು ರಾತ್ರಿ ಹತ್ತು ಗಂಟೆಯಾಗಿರಬಹುದು. ನಮ್ಮಮನೆಯವರೆಲ್ಲಾ ಆಗಲೇ ಮಲಗಲು ಅಣಿಯಾಗುತ್ತಿದ್ದರು. ನನ್ನನ್ನೇಳಿಸುತ್ತಿದ್ದ ನರಸವ್ವನನ್ನು ಗಮನಿಸಿದ ನನ್ನಮ್ಮ ನನಗೆ ಉಣ್ಣಲಿಕ್ಕೆ ತಟ್ಟೆ ಇಟ್ಟು ಅಣಿಮಾಡುತ್ತಿದ್ದಳು. ಕೈಕಾಲು ಮುಖ ತೊಳೆದುಕೊಡು ಊಟದ ತಟ್ಟೆಯ ಮುಂದೆ ಕುಳಿತವನಿಗೆ ಗಮನಕ್ಕೆ ಬಂದದ್ದು ತಟ್ಟೆಗೆ ಚಿತ್ರಾನ್ನ ಬಡಿಸಿಲ್ಲದಿರುವುದು! “ಚಿತ್ರಾನ್ನವೆಲ್ಲಿ...ಹಾಕಿಲ್ಲ?” ನನ್ನ ಉದ್ಗಾರ. ಅಮ್ಮ ತಡವರಿಸಿದಳು, "ಚಿತ್ರಾನ್ನ ಮುಗಿದೋಗೈತೆ...ಬೆಳಗ್ಗೆ ಮಾಡಿಕೊಡ್ತೀನಿ ಈಗಿಷ್ಟುಂಡುಬಿಡು' ಅಮ್ಮನ ಓಲೈಕೆ ಮಾತು ನನಗೆ ಸಮಾಧಾನ ತರಲಿಲ್ಲ. "ನಾನು ಸಂಜೆನಾಗೇ ಹೇಳಿದ್ನಲ್ಲಾ..! ಚಿತ್ರಾನ್ನ ಇಲ್ದೇ ಉಣ್ಣಲ್ಲ ನಾನು.'’ ನಾನು ಹಟವಿಡಿದೆ, ಕಿರುಚಾಡಿದೆ. ಅಮ್ಮನ ಓಲೈಕೆ ಮಾತುಗಳು ವ್ಯರ್ಥವಾದವು. ಮಲಗಲು ಸಿದ್ಧವಾಗುತ್ತಿದ್ದ ಅಪ್ಪ ನಮ್ಮ ಕೋರಿಕೆ ಓಲೈಕೆ ಮಾತುಗಳನ್ನು ಕೇಳಿಸಿಕೊಂಡವರಿಗೆ ರೇಗಿಹೋಗಿದೆ. ಊಟದ ಸ್ಥಳಕ್ಕೆ ಆಗಮಿಸಿದವರೇ ಕೈಯಲ್ಲಿ ಒಂದೆರೆಡು ಬಿಗಿದರು. ಕೋಲೇನಾದರು ಸಿಗುತ್ತದೆಂದು ಅಡಿಗೆ ಮನೆಯ ಒಲೆಯ ಸೌದೆ ಮೂಲೆಯಲ್ಲಿ ತಡಕಾಡುತ್ತಾ ಗದರುತ್ತಿದ್ದರು. ಆಗಲೇ ರಾತ್ರಿಯ ಹೊತ್ತು ಮೀರುತ್ತಿತ್ತು. ಸಮಯ ಮಧ್ಯರಾತ್ರಿಯ ಅತ್ತಿರತ್ತಿರ ಬರುತ್ತಿತ್ತು. ಮುಂದಾಗುವ ಅವಗಡವನ್ನರಿತೆ. ಅಪ್ಪನ ಏಟುಗಳು ನೆನಪಾದವು. ಮೆಲ್ಲಗೆ ತಟ್ಟೆಯ ಮುಂದಿನಿಂದ ಅಳುತ್ತಾ ಎದ್ದೆನು. ಅಮ್ಮನಿಗೆ ನ್ನನ್ನನ್ಹಿಡಿದುಕೊಳ್ಳಲು ಹೇಳುತ್ತಿದ್ದರು. ನಾನು ಮೆಲ್ಲನೆ ಜಾರಿಕೊಂಡು ಮನೆ ಹೊರಗಡೆ ಹಟ್ಟಿಯಂಗಳಕ್ಕಿಳದಿದ್ದೆ. ಹೊರಗಡೆ ಚಂದ್ರ ಮೇಲೇರಿ ಬಂದಿದ್ದ. ಬೆಳದಿಂಗಳ ಬೆಳಕು ಚೆನ್ನಾಗಿ ರಾಚುತ್ತಿತ್ತು. ನಮ್ಮಮನೆಯ ಗಲಾಟೆ ಬಿಟ್ಟರೆ ಊರು ನಿಶ್ಯಬ್ದವಾಗಿತ್ತು.ಗಲಾಟೆ ಕೇಳಿಸಿಕೊಂಡ ಕೆಲವರು ಹೊರಬಂದು "ಏನದು ಗಲಾಟೆ…' ಎಂದು ನೋಡಿ ಒಳಹೋದರು. ಈವೇಳೆಗೆ ಅಗಸರ ನರಸವ್ವ ಆಗಲೇ ನಿದ್ದಗೆ ತೆರಳಿದ್ದಳು. ಅಮ್ಮ ನರಸವ್ವನನ್ನು ಬೈದುಕೊಳ್ಳುತ್ತಿದ್ದಳು..."ಎಲ್ಲಾಅವಳಿಂದಾಗಿಯೇ…?'

ಅಪ್ಪನಿಗೆ ಕೋಪ ಉಕ್ಕೇರಿದ್ದಿತು. "ಮನೆಯೊಳಗಡೆ ಬರುವುದಿಲ್ಲವೇನೋ...’ ಎಂದು ಕೋಲ್ಹಿಡಿದುಕೊಂಡು ಹೊರಬಂದರು. ನಾನು ಇನ್ನು ಕೋಲೇಟು ಶತಸಿದ್ಧ ಎಂದರಿತವನೆ ಮೆಲ್ಲನೆ ಕಾಲಿಗೆ ಬುದ್ಧಿ ಹೇಳಿದೆ. ಊರಮುಂದಕ್ಕೆ ಧೌಡಾಯಿಸಿದೆ. ಗಾಳಪ್ಪನವರ ಮನೆಯ ಪಕ್ಕದ ಕಾಲು ದಾರಿ ಹಿಡಿದೆ. ಅಪ್ಪ ಹಿಂದೆ ಓಡಿಸಿಕೊಂಡು ಬರುತ್ತಿದ್ದರು. ನಡು ರಾತ್ರಿಯಲ್ಲಿ ನಾನು ಮನೆಯಿಂದ ಓಡಿಹೋದದ್ದು…ನನಗೆ ಅದೆಲ್ಲಿಂದ ಬಂದಿತ್ತೋ ಧೈರ್ಯ…ನನಗೇ ಗೊತ್ತಿಲ್ಲ. ಅಪ್ಪ ಓಡಿಸಿಕೊಂಡು ಬರುತ್ತಿದ್ದರು. ನನಗೆ ಬಯವಾದದ್ದು ದೊಡ್ಡಬಾವಿಯ ಕಪಿಲೆಭಾರಿಯ ಹತ್ತಿರ ಅಲ್ಲಿ ಜಾರಿ ಬೀಳುವ ಸಂಭವವಿತ್ತು. ಆದರೂ ಅದನ್ನು ದಾಟಿ ಆಚೆಗೆ ಓಡಿದ್ದೆ. ಅಪ್ಪನೂ ಓಡಿಸಿಕೊಂಡು ಬಾವಿಯ ಕಪಿಲೆಭಾರಿ ದಾಟಿ ಓಡಿಕೊಂಡು ಬಂದರು…"ಎಲ್ಲಿ ಹೋಗ್ತೀಯ..? ನೋಡ್ತೀನಿ!’, ಎಂದು ಕೂಗುತ್ತಿದ್ದರು. ಗಾಳಪ್ಪನವರ ಛಳಿಗಾಲದ ನಾಟಿಯ ಗದ್ದೆಯ ಬದುವಿನ ಮೇಲೆ ಓಡಿದೆ. ಅಪ್ಪ ಅತ್ತಿರತ್ತಿರವಾಗುತ್ತಿದ್ದರು. ಇನ್ನೇನು ಕೈಗೆ ಸಿಗಬೇಕು ಎನ್ನುವಷ್ಟರಲ್ಲಿ…ಬೆಳದಿಂಗಳ ಬೆಳ್ಳಂ ಬೆಳಕಿತ್ತು, ಮಂಡಿಯವರಿಗೆ ಬೆಳೆದಿದ್ದ ಭತ್ತದ ಗದ್ದೆಗಳ ಮಡೆಬಾಯಿ ಒಳಬದುವೊಂದು ಕಣ್ಣಿಗೆ ಬಿದ್ದಿತು. ಸರಕ್ಕನೆ ನಾನು ಒಳಬದುವಿಗೆ ನೆಗೆದು ಗದ್ದೆಯ ಕೆಸರಿಗೆ ಅಲ್ಲಲ್ಲಿ ಕಾಲು ಜಾರಿಸುತ್ತಾ ಓಡಿದೆ. ಅಪ್ಪ, ನಾನು ಮಾಡಿದ ಸಾಹಸಕ್ಕೆ ಹೋಗಲಿಲ್ಲ. ಮಡೆ ಬಾಯಿಯ ಬಳಿಯೇ ನಿಂತು ನೋಡತೊಡಗಿದರು. ಮತ್ತೊಮ್ಮೆ "ಎಲ್ಲೋಗ್ತೀಯ...ಹೋಗು…' ಕೂಗಿ ಹೇಳುತ್ತಿದ್ದರು. ಗದ್ದೆಯ ಮಧ್ಯದಲ್ಲಿಯೇ ನಿಂತು ನಾನು ಹಿಂದುರಿಗಿ ನೋಡುತ್ತಿದ್ದೆ. ಸ್ವಲ್ಪ ಹೊತ್ತು ಕಾದು ಅಪ್ಪ ಹಿಂದಿರುಗಿ ನಡೆದರು. ನಾನು, ಅಪ್ಪ ಕಾಣೆಯಾಗುವವರೆಗೆ ಗದ್ದೆ ಮಧ್ಯೆ ನಿಂತು ಹಾಗೇ ನೋಡುತ್ತಿದ್ದೆ….

ಕೆಲಸಮಯ ಕಳೆಯಿತು. ನಾನು ಪಕ್ಕದಲ್ಲಿಯೇ ಇದ್ದ ವೀರನಾಗಪ್ಪನ ಗುಡಿಯ ಹಳ್ಳದಕಡೆಗೆ ನಡೆದು ಬಿಳಿ ಮರಳಿನ ಮೇಲೆ ನಡೆದು ತಿರಗಿಕೊಂಡು ಗದ್ದೆಯ ಮುಖ್ಯ ಬದುವಿನ ಕಾಲುದಾರಿ ಹಿಡಿದು ಊರಿನ ಕಡೆಗೆ ಬಂದ ದಾರಿಯಲ್ಲಿಯೇ ಹಿಂದಿರುಗಿದೆ. ಹಳ್ಳದಬಳಿ, ಗದ್ದೆಯ ಬದುವಿನ ದಾರಿಯಲ್ಲಿ, ದೊಡ್ಡಬಾವಿಯ ಕಪಿಲೆಭಾರಿಯ ಬಳಿ ನಡೆದು ಗಾಳಪ್ಪನವರ ಮನೆಯ ಪಕ್ಕದ ಹಾದಿಯಲ್ಲಿ...ಆ ಹೊತ್ತಿನಲ್ಲಿ ನನಗಾವ ಭಯವೂ ಆಗಲಿಲ್ಲ. ಊರಮುಂದಿನ ನೀರುಸೇದುವ ಬಾವಿಯ ಬಳಿಗೆ ಬಂದು ಮನೆಯಕಡೆಗೊಮ್ಮೆ ದಿಟ್ಟಿಸಿ ನೋಡಿದೆ. ಚೆನ್ನಾಗಿ ಬೀಳುತ್ತಲಿದ್ದ ಬೆಳದಿಂಗಳ ಬೆಳಕಿನಲ್ಲಿ ನಿಚ್ಚಳವಾಗಿ ಕಾಣುತ್ತಿತ್ತು ಮನೆಯಂಗಳದ ಪಕ್ಕದಲ್ಲಿದ್ದ ಕಲ್ಲುಮಂಚ. ಮನೆಮಂದಿಯ ಸುಳಿವೇನೂ ಇರಲಿಲ್ಲ. ನಿಧಾನವಾಗಿ ಸದ್ದಿಲ್ಲದೆ ನಡೆದ ನಾನು ಮೆಲ್ಲಗೆ ಕಲ್ಲುಮಂಚದಡಿಯ ಕತ್ತಲೆಯಲ್ಲಿ ಕಾಯ್ದು ಕುಳಿತೆ. ಸ್ವಲ್ಪಹೊತ್ತಿನ ನಂತರ ಅಮ್ಮ ಮನೆಯೊಳಗಿನಿಂದ ಆಚೆಗೆ ಬಂದು ಹಟ್ಟಿಯಂಗಳದಲ್ಲಿ ಓಡಾಡುತ್ತಾ ಆಚೀಚೆ ಹುಡುಕಾಡಿದರು. ಆಕೆಗೆ ಏನೂ ಕಂಡು ಬರದಿದ್ದರಿಂದ ಸುಮ್ಮನೆ ನಿಟ್ಟುಸಿರಿನೊಂದಿಗೆ ಒಳನಡೆದಳು. ಇದೇ ಸಮಯ ಕಾಯುತ್ತಿದ್ದ ನಾನು ಕಲ್ಲುಮಂಚದ ಕೆಳಗಿನ ಕತ್ತಲೆಯಿಂದ ಈಚೆ ಬಂದು ಅದರ ಮೇಲೆಯೇ ಬೆಳದಿಂಗಳ ಬೆಳಕಿನಲ್ಲಿ ನಿಚ್ಚಳವಾಗಿ ಕಾಣುವಂತೆ ಕುಳಿತುಕೊಂಡೆನು. ಐದ್ಹತ್ತು ನಿಮಿಷಗಳಾದ ಮೇಲೆ ಅಮ್ಮ ಪುನಃ ಹೊರಬಂದಳು. ಕಲ್ಲುಮಂಚದ ಮೇಲೆ ಕುಳಿತ ನನ್ನನ್ನು ನೋಡಿದ ಕೂಡಲೇ "ಇಗಳೋ… ಇಲ್ಲೇ ಕುಳ್ತಿದ್ದೀಯ!’ ಎಂದು ಹೇಳಿದವಳೇ ಮೆಲ್ಲನೆ ಹತ್ತಿರ ಬಂದು ಕೈಹಿಡಿದು "ನಿಮ್ಮಪ್ಪ ಮಲಗಿಕೊಂಡವ್ರೆ ಬಾ. ಗಲಾಟೆ ಮಾಡಬೇಡ. ಚಿತ್ರಾನ್ನ ಮಾಡಿದ್ದೇನೆ...' ಎಂದು ಹೊರಗಿನ ಜಗುಲಿಯೆದುರಿಗೇ ಇದ್ದ ಅಡಿಗೆ ಕೋಣೆಗೆ ಕರೆದುಕೊಂಡು ಹೋಗಿ ಕುಳ್ಳಿರಿಸಿ ನಾನು ತಿನ್ನುವಷ್ಟು ಚಿತ್ರಾನ್ನವನ್ನು ತಟ್ಟೆಗೆ ಹಾಕಿ ನನ್ನ ಮುಂದಿಟ್ಟಳು. ನಾನು ಸುತ್ತಲೂ ಕಣ್ಣಾಡಿಸುತ್ತಾ ತಿನ್ನಲು ತೊಡಗಿದೆ. ಒಳಗೆ ಅಪ್ಪ ನಿದ್ದೆಗೆ ಬಿದ್ದಿರುವುದು ಅವರ ಗೊರಕೆ ಹೊಡೆಯುವ ಸದ್ದಿನಿಂದಾಗಿ ಅದು ಸ್ಪಷ್ಟವಾಗಿತ್ತು. ಕಾಲುಗಳೆಲ್ಲಾ ಕೆಸರಾಗಿರುವುದನ್ನು ಗಮನಿಸಿದ ಅಮ್ಮ ನಾನು ತಿಂದುಂಡ ಮೇಲೆ ಅಂಗಳದ ಬಳಿ ಮೋರಿಯಬಳಿಗೆ ಚೆಂಬು ನೀರು ಸಹಿತ ಕರೆದುಕೊಂಡುಹೋಗಿ ಕೆಸರಿನ ಕಾಲುಗಳನ್ನು ತೊಳೆದು ಒರೆಸಿ ಕರೆದುಕೊಂಡು ಹೋಗಿ ಮಲಗಿಸಿದರು. ವೇಳೆ ನಮ್ಮಪ್ಪನ ಹಳೆಯ ಅಲಾರಾಂ ಗಡಿಯಾರದಲ್ಲಿ ರಾತ್ರಿಯ ಎರಡು ಗಂಟೆಯಾಗಿತ್ತು, ದೀಪವಿಡಿದು ನೋಡಿದ ಅಮ್ಮ ಹೇಳಿದಳು.

ಬೆಳಗ್ಗೆ ನಾನು ಎದ್ದಾಗ ಸೂರ್ಯ ಹುಟ್ಟಿ ಎರಡ್ಮೂರು ಮಾರು ಮೇಲೆ ಬಂದಿದ್ದ. ಅಷ್ಟರೊಳಗಾಗಲೇ ಸರುರಾತ್ರಿಯಲಿ ನಾನು ಚಿತ್ರಾನ್ನ ಮಾಡಿಸಿಕೊಂಡು ತಿಂದುಂಡದ್ದು ಎರಡು ಕೇರಿಗಳಷ್ಟೇ ಇರುವ ನಮ್ಮೂರಿನಲ್ಲೆಲ್ಲಾ ಸುದ್ದಿಯಾಗಿತ್ತು. ಸರೀಕರೆದುರಿನಲ್ಲಿ ನೋಡಿದವರಿಗೆಲ್ಲಾ ನಾನು ನಗೆಪಾಟಲಿನ ವಸ್ತುವಾಗಿಬಿಟ್ಟಿದ್ದೆ….ಇದು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದ ಹಾಗೆ ಉಳಿದುಬಿಟ್ಟಿದೆ.

ಈ ವಿಷಯವನ್ನು ಮತ್ತು ನಾನೊಮ್ಮೆ ರಾತ್ರಿಹೊತ್ತು ಮನೆಯವರ ಮೇಲೆ ಮುನಿಸಿಕೊಂಡು ಹೋಗಿ ಊರಮುಂದಿನ ಹಳೆಯ ಮಾರಮ್ಮನ ಗುಡಿಯೊಳಗೆ ಕತ್ತಲೆಯಲ್ಲಿ ಮಲಗಿಕೊಂಡಿದ್ದ ವಿಷಯವನ್ನು ನನ್ನ ಮೈಸೂರಿನ ಚಿಕ್ಕಮ್ಮ ಅನಸೂಯಮ್ಮ ನನ್ನ ಹೆಂಡತಿ ವಸಂತಕುಮಾರಿಗೂ ಹೇಳಿ ಅಗಾಗ್ಗೆ ತಮಾಷೆಗೆ ಕೆಡವಿದ್ದಾರೆ. ಮಾರಮ್ಮನ ಗುಡಿಯ ಕತ್ತಲೆಯಲ್ಲಿ ಮಲಗಿಕೊಡಿದ್ದು ಚೆನ್ನಾಗಿ ಜ್ಞಾಪಕವಿದೆ. ಆದರೆ ಯಾಕೆ ಏನು ಯಾಕಾಗಿ ಮಾಡಿದೆಯೆಂಬುದು ಸರಿಯಾಗಿ ನೆನಪಿಗೆ ಬರುತ್ತಿಲ್ಲ.###
ಟಿ.ದಿವಾಕರ
ಬಾಲಂಗೋಚಿ:
ನನ್ನ ಬ್ಲಾಗೋದುಗರಿಗೊಂದು ವಿಷಯವನ್ನಿಲ್ಲಿ ಹೇಳಲಿಷ್ಟಪಡುತ್ತೇನೆ. ಚಿತ್ರಾನ್ನವೆಂದರೆ ನಮ್ಮಪ್ಪನಿಗೂ ಪಂಚಪ್ರಾಣ. ಅದೂ ಕೂಡ ಎರಳೆಕಾಯಿ ಅಥವಾ ಮಾವಿನಕಾಯಿ ಹುಳಿ ಹಾಕಿ ಮಾಡಿದ ಚಿತ್ರಾನ್ನವೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ….

Comments

Popular posts from this blog

ಲಾಸ್‌ಎಂಜಲಿಸ್‌ನಿಂದ ಟಿಟಾನ್‌ ವಿಲೇಜ್‌ವರೆಗೆ

ಜೀವಂತ ಕ್ರಿಯಾಶೀಲ ಜ್ವಾಲಾಮುಖಿಯ ಮೇಲೆ 18 ಗಂಟೆಗಳ ಓಡಾಟ

ಕನ್ನಡಕ್ಕಾಗಿ ವಿಂಡೋಸ್ ಎದುರು ಲಿನಕ್ಸ್ ಗಣಕ ನಿರ್ವಹಣಾ ತಂತ್ರಾಂಶ